'ಮಂಗಳೂರು ಸಮಾಚಾರ " & ಮೊಗ್ಲಿಂಗ್

ಜರ್ಮನಿಯ ಜೊಹಾನ್ ಗುಟನ್ಬರ್ಗ 1440 ರಲ್ಲಿ ಎರಕಹೊಯ್ದ ಅಚ್ಚು ಮೊಳೆ ತಯಾರಿಸಿ, ಪವಿತ್ರ ಗ್ರಂಥ `ದಿ ಬೈಬಲ್' ಅನ್ನು ದಪ್ಪನೆಯ ಹಾಳೆಯ ಮೇಲೆ ಮುದ್ರಿಸಿದಾಗ, ಅದೊಂದು ಕ್ರಾಂತಿಕಾರಕ ಆವಿಷ್ಕಾರವಾಗಿತ್ತು. ಮುದ್ರಣ ಜ್ಞಾನದ ದಾಹ ತಣಿಸುವ ಪ್ರಮುಖ ಸೆಲೆಯಾಯಿತು. ನಾಗರಿಕತೆಯ ಬೆಳವಣಿಗೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ ಹಲವೇ ಸಾಧನೆಗಳಲ್ಲಿ ಮುದ್ರಣ ಯಂತ್ರ ಸಹ ಒಂದು ಎಂಬ ಸತ್ಯವನ್ನು ಆಧುನಿಕ ಇತಿಹಾಸಕಾರರು ಕೂಡ ಒಪ್ಪಿಕೊಂಡಿದ್ದಾರೆ.ಯೇಸುಕ್ರಿಸ್ತನ ಸಂದೇಶಗಳನ್ನು ಜಗತ್ತಿಗೆ ತಿಳಿಸಬೇಕೆಂಬ ಹಂಬಲದಿಂದ ಯುರೋಪಿನಲ್ಲಿ ಹಲವು ಧರ್ಮಪ್ರಸಾರ ಸಂಸ್ಥೆಗಳು ಹುಟ್ಟಿಕೊಂಡವು. ಜರ್ಮನಿ-ಪ್ರಾನ್ಸ್ ದೇಶಗಳ ಗಡಿಗೆ ಹೊಂದಿಕೊಂಡಿರುವ ಪುಟ್ಟ ಪಟ್ಟಣವಾದ ಬಾಸೆಲ್ ನಲ್ಲಿ ಅಂದಿನ ಜನ ಯುರೋಪಿನಲ್ಲಿನ ಯುದ್ಧಗಳಿಂದ ಬೇಸತ್ತಿದ್ದರು. ದೇವರ ಸೇವೆ ಮಾಡಿದರೆ ಶಾಂತಿ ನೆಲಸಬಹುದೆಂಬ ಸದುದ್ದೇಶದಿಂದ ಆರು ಜನ ಪ್ರಮುಖರು ಕಟ್ಟಿದ ಧರ್ಮಪ್ರಸಾರ ಸಂಸ್ಥೆ ಮುಂದೆ ಬಾಸೆಲ್ ಮಿಷನ್ ಎಂದು ವಿಶ್ವವಿಖ್ಯಾತ ಹೆಸರಾಯಿತು. ಈ ಸಂಸ್ಥೆಯ ಸದಸ್ಯರಾದ ಸ್ಯಾಮುಯಲ್ ಹೆಬಿಕ್ ಸೇರಿದಂತೆ ಮೂವರು 1834 ರಲ್ಲಿ ಭಾರತದ ಕಲ್ಲಿಕೋಟೆ ತಲುಪಿದರು. ನಂತರ ಮಂಗಳೂರಿಗೆ ಪಯಣಿಸಿದರು. ಬ್ರಿಟಿಷರ ಆಡಳಿತಕ್ಕೆ ಭಾರತ ಒಳಪಟ್ಟಿದ್ದರಿಂದ, ಬಾಸೆಲ್ ಧರ್ಮಪ್ರಚಾರ ಸಂಸ್ಥೆ ವಿಶೇಷ ಅನುಮತಿಯನ್ನು ಪಡೆದು, ತಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸಿದರು. 176 ವರ್ಷಗಳ ಇತಿಹಾಸದ ಈ ಮಹಾನ್ ಸಂಸ್ಥೆ ಕನ್ನಡಿಗರಿಗೆ ಮೊದಲ ಸಲ ಮುದ್ರಣ ಕಲೆ ಪರಿಚಯಿಸಿತು. ಭಾರತದ ಮೊದಲ ಪತ್ರಿಕೆ 1780 ರಲ್ಲೇ ಆರಂಭಿವಾಗಿತ್ತು. ಕಲ್ಕತ್ತಾ ನಗರದಲ್ಲಿ ಅದು ಆಂಗ್ಲ ಭಾಷೆಯಲ್ಲಿ ಪ್ರಕಟವಾಗುತ್ತಿತ್ತು.
ಧರ್ಮ ಪ್ರಸಾರದ ಜತೆಗೆ ಅನೇಕ ಉಪಯುಕ್ತವಾದ ಶೈಕ್ಷಣಿಕ ಹಾಗೂ ಕೈಗಾರಿಕಾ ತರಬೇತಿಗಳನ್ನು ಈ ಸಂಸ್ಥೆ ಆರಂಭಿಸಿತು. 1843 ರಲ್ಲಿ ಒಂದು ಪತ್ರಿಕೆಯನ್ನು ಆರಂಭಿಸಿ ನಿಖರವಾದ ಸುದ್ದಿಯನ್ನು ಜನತೆಗೆ ನೀಡಬೇಕೆಂದು ನಿರ್ಧರಿಸಿತು. ಅಂಚೆ ಸೌಲಭ್ಯ ಬಿಟ್ಟರೆ, ಉಳಿದ ಯಾವ ಬಗೆಯ ಸಂಪರ್ಕ ಸಾಧನಗಳಿರಲಿಲ್ಲ. ಗಾಳಿ ಸುದ್ದಿಗೆ ಹೆಚ್ಚಿನ ಪ್ರಧಾನವಿತ್ತು. ಈ ಮಹತ್ಕಾರ್ಯದ ರೂವಾರಿ ಹೆರ್ಮನ್ ಪ್ರೆಢರಿಕ್ ಮೊಗ್ಲಿಂಗ್. ಕನ್ನಡ ಪತ್ರಿಕೋದ್ಯಮದ ಮೂಲಪುರುಷ. ಪ್ರಾತಃಸ್ಮರಣಿಯ ಲೇಖಕ, ಸಾಹಿತಿ, ಇತಿಹಾಸಕಾರ, ತರ್ಜುಮೆದಾರ ಹಾಗೂ ಸಂಗ್ರಹಕಾರ. ಆಗಿನ ಕಾಲದ
ಕಿಟಕಿಯಿರದ ಬಿಡಾರದಲ್ಲಿರುವ ಜನರಿಗೆ ಪತ್ರಿಕೆಗಳ ಮೂಲಕ ನಾಲ್ಕು ದಿಕ್ಕಿಗೆ ಬೆಳಕು ಬಿರುವ ಹಾಗೆ ಸಮಾಚಾರ ನಿಡುವ ಪಾಕ್ಷಿಕ ಪ್ರಕಟಣೆಯಾದ `ಮಂಗಳೂರು ಸಮಾಚಾರ' 1843 ಜುಲೈ 1 ರಂದು ಹೊರಡಿಸುವ ಐತಿಹಾಸಿಕ ನಿರ್ಧಾರ ಕೈಗೊಂಡನು. ಈ ಪತ್ರಿಕೆ ಕನ್ನಡ ಪತ್ರಿಕಾ ಲೋಕಕ್ಕೆ ಮುನ್ನುಡಿ ಬರೆಯಿತು. ಈ ಮಹತ್ತರ ಕೊಡುಗೆಯ ಮೂಲಕ ಹರ್ಮನ ಪೆಡ್ರಿಕ ಮೊಗ್ಲಿಂಗ್ ಕನ್ನಡ ಪತ್ರಿಕೋದ್ಯಮದ ಆದ್ಯ ಪ್ರವರ್ತಕನಾದ. ಮೊಗ್ಲಿಂಗ್ ಮತಾಂತರ, ಧರ್ಮ ಪ್ರಚಾರಕ್ಕೆ ಮಹತ್ವ ನೀಡದೆ, ಜನಸಮೂಹದ ಬೌದ್ದಿಕ ಸುಧಾರಣೆಗೆ ಒತ್ತು ನೀಡಿದ ಮೇಧಾವಿ ಎಂದೇ ಹೇಳಬಹುದು.
ಆತನ ಬದುಕೆ ಒಂದು ರೋಚಕ ವೃತ್ತಾಂತ. ಜರ್ಮನಿಯ ಪ್ರಕನಹೈಮ ಊರಿನಲ್ಲಿ 29-05-1811 ರಲ್ಲಿ ವಿಲ್ಹೆಲ್ಮ ಲುಡವಿಗ ಪ್ರೆಡ್ರಿಕ ಮೊಗ್ಲಿಂಗ್ ಮತ್ತು ರೀಸೆ ಎಂಬ ದಂಪತಿಗಳ ಜೇಷ್ಠ ಪುತ್ರನಾಗಿ ಜನಿಸಿದ ಹರ್ಮನ ಪೆಡ್ರಿಕ ಮೊಗ್ಲಿಂಗ್, ಶಿಕ್ಷಣದಲ್ಲಿ ಅಪಾರ ಆಸಕ್ತಿ ಪ್ರದರ್ಶಿಸಿದ. ಧರ್ಮ ಪ್ರಚಾರಕ ಸಂಸ್ಥೆಗಳ ಪ್ರಭಾವ ವ್ಯಾಪಕವಾಗಿದ್ದ ಆ ದಿನಗಳಲ್ಲಿ ಬೈಬಲ್ಲಿನ ನಿತ್ಯ ಪಠಣ ಹಾಗೂ ಅಭ್ಯಾಸಗಳು ಈತನ ಮೇಲೆ ಗಂಭೀರ ಪರಿಣಾಮ ಬೀರಿದವು. ತಂದೆ ಶಿಕ್ಷಕನಾಗಿದ್ದರಿಂದ ಮನೆ ತುಂಬ ಶೈಕ್ಷಣಿಕ ವಾತಾವರಣವಿತ್ತು. ಲ್ಯಾಟಿನ ಭಾಷೆಯ ಅಧ್ಯಯನದ ಬಗ್ಗೆ ವಿಶೇಷ ಆಸಕ್ತಿ ವಹಿಸಿದ ಮೊಗ್ಲಿಂಗ್ ಧರ್ಮ ಬೋಧನೆ ಮಾಡುವ ಸೆಮನರಿಯಲ್ಲಿ ತನ್ನ ಭಾಷಾ ಪಾಂಡಿತ್ಯವನ್ನು ಪ್ರದರ್ಶಿಸಿದ.1829 ರಲ್ಲಿ ಟ್ಯಬಿಂಗಿನ ವಿಶ್ವವಿದ್ಯಾಲಯ ಸೇರಿದ ಮೊಗ್ಲಿಂಗ್ ಸಾಹಿತ್ಯ ಅಭ್ಯಾಸದಲ್ಲಿ ತಲ್ಲೀನನಾದ. ಮನೋವಿಶ್ಲೇಷಣೆ ಹಾಗೂ ಆಧ್ಯಾತ್ಮ ಅವನ ನೆಚ್ಚಿನ ವ್ಯಾಸಂಗ ಕ್ಷೇತ್ರಗಳಾದವು. 1834 ರಲ್ಲಿ ವಿದ್ಯಾಭ್ಯಾಸ ಮುಗಿಸಿ ಸಹಾಯಕ ಪಾದ್ರಿಯಾಗಿ ಧಾರ್ಮಿಕ ಸೇವೆ ಪ್ರಾರಂಭಿಸಿದ. ಕ್ರೈಸ್ತನ ತತ್ವಗಳನ್ನು ಭಾವ ಪೂರಕವಾಗಿ ವಿವರಿಸುವ ಕಲೆಯನ್ನು ಮೊಗ್ಲಿಂಗ್ ಕರಗತ ಮಾಡಿಕೊಂಡ. ತನ್ನ ವಿಶೇಷ ಪಾಂಡಿತ್ಯಕ್ಕೆ ಡಾಕ್ಟರೇಟ ಪದವಿಯನ್ನು ಸಹ ಪಡೆದುಕೊಂಡ ಮೊಗ್ಲಿಂಗ್ ಧರ್ಮ ಪ್ರಚಾರವನ್ನೇ ತನ್ನ ಜೀವನದ ಮುಖ್ಯ ದ್ಯೇಯವನ್ನಾಗಿರಿಸಿಕೊಂಡಿದ್ದ.

ಈ ಪತ್ರಿಕೆ ಪ್ರಕಟವಾಗುವ ಅವಧಿಯಲ್ಲಿ ಭಾರತೀಯ ಪತ್ರಿಕೋದ್ಯಮ ಆಗ ತಾನೆ ಅಂಬೆಗಾಲಿಡುತ್ತಿತ್ತು. ಬಹುತೇಕ ಪ್ರಕಟಣೆಗಳು ದೇಶದ ಪ್ರಮುಖ ನಗರಗಳಾದ ಮುಂಬಯಿ, ಕಲ್ಕತ್ತಾ ಹಾಗೂ ಮದ್ರಾಸ್ ಗಳಿಂದ ಮಾತ್ರ ಹೊರಬರುತ್ತಿದ್ದವು. ಯೂರೋಪಿನಿಂದ ಪತ್ರಿಕೆಗಳು ಬರಲು ನಾಲ್ಕಾರು ತಿಂಗಳುಗಳು ಬೇಕಾಗುತ್ತಿತ್ತು. ಇಂತಹ ದಿನಗಳಲ್ಲಿ ಮೊಗ್ಲಿಂಗ್ ನಿಯಮಿತವಾಗಿ ಸುದ್ದಿಗಳನ್ನು ಸಂಗ್ರಹಿಸಿ, ಭಾಷಾಂತರಿಸಿ, ಪ್ರಕಟಣೆಗೆ ಸಿದ್ದಪಡಿಸುತ್ತಿದ್ದ. ಬಹುಪಾಲು ಬರವಣಿಗೆ ಈತನೊಬ್ಬನಿದಂಲೇ ಆಗುತ್ತಿತ್ತು. ಓದುಗರ ಪತ್ರಗಳನ್ನು ಪ್ರಕಟಿಸಲು ಆತ ಹಿಂಜರಿಯಲಿಲ್ಲ. ಇನ್ನು ಮುಂದೆ ಯಾರಾದರೂ ಒಂದು ವರ್ತಮಾನ ಸೇರಿಸಬೇಕು ಅಂತ ಬರೆದು ಕಳುಹಿಸುವದಾದರೆ ಅವರ ಹೆಸರು, ಊರು, ಮುಂತಾಗಿ ನಮಗೆ ತಿಳಿಯುವ ಹಾಗೆ ಮಾತ್ರ ಬರೆದು ಟಪಾಲ ದಸ್ತುರಿ ಕೊಟ್ಟು ಕಳಿಸಿದರೆ ಆ ಸಮಾಚಾರ ಛಾಪಿಸಬಹುದು ಎಂದು ಓದುಗರಿಗೆ ತಿಳಿಯ ಹೇಳುತ್ತಿದ್ದನು.
ಮೊಗ್ಲಿಂಗ್ ಪತ್ರಿಕಾವೃತ್ತಿಯ ಬಹು ಮಹತ್ವದ ಅಂಶವೆಂದರೆ, ಧರ್ಮಪ್ರಚಾರ ಸಂಸ್ಥೆಯಿಂದ ಹೊರಡಿಸಲ್ಪಟ್ಟ ಪತ್ರಿಕೆಯಾದರೂ, 'ಮಂಗಳೂರು ಸಮಾಚಾರ' ಎಲ್ಲ ಬಗೆಯ ವರ್ತಮಾನಗಳನ್ನು ಪ್ರಕಟಿಸುತ್ತಿತ್ತು. ಓದುಗರ ಕೂತುಹಲವನ್ನ ಅರಿತಿದ್ದ ಮೊಗ್ಲಿಂಗ್, ವರ್ತಮಾನಗಳನ್ನು ಬಹು ಎಚ್ಚರಿಕೆಯಿಂದ ಆಯ್ದು, ಭಾಷಾಂತರಿಸಿ ಸರಳ ಕನ್ನಡದಲ್ಲಿ ಪ್ರಕಟಿಸುತ್ತಿದ್ದ. ಇದೊಂದು ಸ್ವತಂತ್ರ ವಾರ್ತಾ ಪತ್ರಿಕೆ ಎನ್ನುವ ರೂಪುರೇಷೆ ಹೊಂದಿತ್ತು ಎಂಬುದು ವಿಶೇಷ. ಇಂಗ್ಲಿಷರ ಆಳ್ವಿಕೆಯ ಆ ಮಹತ್ವದ ದಿನಗಳಲ್ಲಿ ಬಹುತೇಕ ರಾಜಸಂಸ್ಥಾನಗಳು ನಾಶವಾಗಿ, ಕಂಪನಿ ಆಡಳಿತ ವಿಸ್ತಾರವಾಗುತ್ತಿದ್ದ ಕಾಲವದು. ಈ ಎಲ್ಲ ರಾಜಕೀಯ ಬೆಳವಣಿಗೆಗಳ ಕಿರು ಪರಿಚಯಗಳನ್ನು ಈ ಪತ್ರಿಕೆ ಮಾಡುತ್ತಿತ್ತು. ಈ ಪ್ರಕಟಣೆಗೆ ಕನ್ನಡ ಭಾಷಿಕರಿಂದ ಬಂದ ಪ್ರತಿಕ್ರಿಯೆಯನ್ನು ಗಮನಿಸಿದ, ಮೊಗ್ಲಿಂಗ್ ಇದು 'ಮಂಗಳೂರು ಸಮಾಚಾರ' ದ ಬದಲಾಗಿ 'ಕನ್ನಡ ಸಮಾಚಾರ' ವಾದರೆ ತುಂಬ ಅರ್ಥಪೂರ್ಣವಾಗುತ್ತದೆ ಎಂದು ನಿಶ್ಚಯಿಸಿದ. ಕನ್ನಡ ಭಾಷಿಕರು ವಿಶಾಲವಾದ ಪ್ರದೇಶಗಳಲ್ಲಿ ನೆಲೆಸಿದ್ದಾರೆ ಎಂಬ ಅಂಶವನ್ನ ಆತ ಗಮನಿಸಿ ಪತ್ರಿಕೆಯ ಕ್ಷೇತ್ರ ವ್ಯಾಪ್ತಿ ವಿಸ್ತಾರವಾಗಬೇಕೆಂಬ ಕನಸು ಕಂಡ. ಓದುಗರ ಬೆಂಬಲ ಆತನ ನಿರೀಕ್ಷೆಗೆ ಮೀರಿತ್ತು. ವಿವಿಧ ಪ್ರಾಂತ್ಯಗಳಿಂದ ಕನ್ನಡ ಭಾಷಿಕರು ಬರೆಯುತ್ತಿದ್ದ ಪತ್ರಗಳು ಮೊಗ್ಲಿಂಗ್ಗೆ ಅತೀವ ಆನಂದ ನೀಡುತ್ತಿದ್ದವು. ಆತನೇ ಹೇಳಿರುವ ಹಾಗೆ ಮಂಗಳೂರು, ಮೈಸೂರು, ತುಮಕೂರು, ಬಳ್ಳಾರಿ, ಶಿವಮೊಗ್ಗ, ಹುಬ್ಬಳ್ಳಿ, ಶಿರಸಿ, ಹೊನ್ನಾವರ ಮೊದಲಾದ ಸ್ಥಳಗಳಲ್ಲಿ ಕೆಲವು ನೂರು ಮಂದಿ ಈ ಕಾಗದವನ್ನು ಈ ವರೆಗೆ ತೆಗೆದುಕೊಳ್ಳುತ್ತಾ ಬಂದರು. ಮೊದಲಿನ ಕಾಗದಗಳನ್ನು ಛಾಪಿಸಿ ಪ್ರಕಟಣೆ ಮಾಡುವಾಗ. ನಾವು ಮಾಡಿದ ಆಲೋಚನೆ ಈ ಕಾಲದಲ್ಲಿ ಈ ದೇಶದಲ್ಲಿ ಆನೇಕರಿಗೆ ಕನ್ನಡ ಭಾಷೆಯಲ್ಲಿ ಬರೆದ ಒಂದು ಸಮಾಚಾರ ಕಾಗದವನ್ನು ಓದುವದರಲ್ಲಿ ಮತಿ ಆಗುವದೆಂದು ನೋಡಿ ಸಂತೋಷದಿಂದ ಅದನ್ನು ವೃದ್ದಿ ಮಾಡುವ ಪ್ರಯತ್ನದಿಂದ ಇನ್ನು ಮುಂದೆ ಅದನ್ನು ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿ ಇರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚು ಪಡಿ ಮಾಡಲಿಕ್ಕೆ ನಿಶ್ಚೈಸಿದ್ದೇವೆ. ಆ ಮೇಲೆ ಕನ್ನಡ ಸೀಮೆಯ ನಾಲ್ಕು ದಿಕ್ಕುಗಳಲ್ಲಿ ಇರುವವರು ಶುದ್ಧವಾದ ಅಚ್ಚು ಮೊಳೆಗಳಿಂದ ಆಗುವ ಬರಹವನ್ನು ಶುಲಭವಾಗಿ ಓದಬಹುದು. ಇದಲ್ಲದೆ, ಹೆಚ್ಚು ವರ್ತಮಾನವಂನು ಚರಿತ್ರ್ರೆಗಳನ್ನೂ ವಿದ್ಯಾಪಾಠಗಳನ್ನೂ ಬುದ್ದಿ ಮಾತುಗಳನ್ನು ಬರಿಯುವದಕ್ಕೆ ಸ್ಥಳ ಶಿಕ್ಕುವುದು ಎಂದು ಪ್ರಕಟಿಸಿದ.
ಪತ್ರಿಕೆಯೊಂದರ ಮೂಲಕ ಎಲ್ಲ ಕನ್ನಡ ಭಾಷಿಕರನ್ನು ತಲುಪುವ ಹೆಬ್ಬಯಕೆ ಆತನದಾಗಿತ್ತು. ಸುಮಾರು ಎಂಟು ತಿಂಗಳು ಮಂಗಳೂರಿನಲ್ಲಿ ಪ್ರಕಟವಾದ ಈ ಪತ್ರ್ರಿಕೆ ಬಳ್ಳಾರಿಗೆ ಮಾರ್ಚ 1844 ರಲ್ಲಿ ವರ್ಗಾವಣೆಗೊಂಡಿತು. ನಂತರ `ಕನ್ನಡ ಸಮಾಚಾರ'ವೆಂದು ಪುನರ್ ನಾಮಕರಣಕಗೊಂಡಿತು. ಬಳ್ಳಾರಿಯಲ್ಲಿ ಸುಮಾರು ಹತ್ತು ತಿಂಗಳ ಕಾಲ ಈ ಪತ್ರಿಕೆ ಪ್ರಕಟವಾಯಿತು. ಮೊಗ್ಲಿಂಗ್ ನಷ್ಟು ಕ್ರೀಯಾಶಾಲಿ ಸಮಾಚಾರ ಸಂಗ್ರಹಕಾರರು ಬಳ್ಳಾರಿಯಲ್ಲಿ ಲಭ್ಯವಾಗಲಿಲ್ಲ. ಮಂಗಳೂರಿನಲ್ಲಿದ್ದು ಕೊಂಡು ಬಳ್ಳಾರಿಯಲ್ಲಿ ಪತ್ರಿಕೆ ನಡೆಸುವ ಆತನ ಸಾಹಸ ಯಶಸ್ವಿಯಾಗಲಿಲ್ಲ.

1836 ರಿಂದ 1861 ರವರೆಗೆ ಮೊಗ್ಲಿಂಗ್ ಪತ್ರಕರ್ತನಾಗಿ, ಸಾಹಿತಿಯಾಗಿ, ಶಿಕ್ಷಕನಾಗಿ, ಅನುವಾದಕನಾಗಿ, ಧರ್ಮಪ್ರಚಾರಕನಾಗಿ, ಗಾದೆಗಳ ಸಂಗ್ರಹಕಾರನಾಗಿ ಅಮೋಘವಾದ ಸೇವೆ ಸಲ್ಲಿಸಿದ. ಮಂಗಳೂರು, ಗದಗ, ಹುಬ್ಬಳ್ಳಿ ಮತ್ತು ಮಡಿಕೇರಿ ಆತನ ಪ್ರಮುಖ ಕಾರ್ಯಕ್ಷೇತ್ರಗಳಾಗಿದ್ದವು. ಹಲವೇ ತಿಂಗಳುಗಳ ಕಾಲ ಪತ್ರಿಕಾ ಪ್ರಕಟಣೆಯಲ್ಲಿ ತನ್ನ ಚತುರತೆಯನ್ನ ಮೊಗ್ಲಿಂಗ್ ಸಾಬೀತುಪಡಿಸಿ, ಕನ್ನಡ ಪತ್ರಿಕೋದ್ಯಮ ಬೆಳವಣಿಗೆಗೆ ತಳಪಾಯ ಹಾಕಿದ. ತಾನು ಬದುಕಿದ್ದ 70 ವರ್ಷಗಳ ಅವಧಿಯಲ್ಲಿ ಸುಮಾರು 25 ವರ್ಷಗಳ ಕಾಲ ಕನ್ನಡನಾಡಿನಲ್ಲಿ ಆತ ಸಲ್ಲಿಸಿದ ಸೇವೆ ಗುರುತರವಾದದ್ದು.ಕಳೆದ 167 ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮ ವೈವಿಧ್ಯಮಯವಾಗಿ ಬೆಳೆದಿದೆ. ಕನ್ನಡ ಪತ್ರಿಕೆಗಳ ಒಟ್ಟು ಪ್ರಸಾರ 30 ಲಕ್ಷವಿದೆ. ಕನ್ನಡ ಭಾಷಿಕರ ಸಂಖ್ಯೆಗೆ ಹೋಲಿಸಿದರೆ ಇದು ಸಮಾಧಾನಕರವಲ್ಲ. ನೆರೆಯ ಕೇರಳದಲ್ಲಿ ಮಲೆಯಾಳ ಮನೋರಾಮ ದಿನಪತ್ರಿಕೆಯ ಪ್ರಸಾರ 17 ಲಕ್ಷ ಮೀರಿದೆ. ಅಲ್ಲಿ 10 ಲಕ್ಷಕ್ಕಿಂತ ಹೆಚ್ಚು ಮಾರಾಟವಾಗುವ ಮಾತೃಭೂಮಿ ಎನ್ನುವ ಇನ್ನೊಂದು ಪತ್ರಿಕೆಯಿದೆ. ತೆಲಗಿನ ಈ ನಾಡು ಪತ್ರಿಕೆ ಪ್ರತಿನಿತ್ಯ 23 ಲಕ್ಷ ಪ್ರತಿಗಳನ್ನು ಛಾಪಿಸುತ್ತಿದೆ. ಈ ಹಿನ್ನಲೆಯಲ್ಲಿ ಕನ್ನಡ ಪತ್ರಿಕೆಗಳ ಪ್ರಸಾರ ವ್ಯಾಪಕವಾಗಬೇಕಾಗಿದೆ. ಬನ್ನಿ ಪ್ರತಿ ಕನ್ನಡಿಗರ ಮನೆಯಲ್ಲಿಯೂ ಪತ್ರಿಕೆಗಳು ರಾರಾಜಿಸಲಿ. ಜ್ಞಾನ-ಮನರಂಜನೆ ವೈವಿಧ್ಯಮಯವಾಗಿ ಪತ್ರಿಕೆಗಳ ಮೂಲಕ ಲಭ್ಯವಾಗಲಿ ಎಂದು ಆಶಿಸೋಣ.
Lot of usefull info. Thanks a lot.
ReplyDeleteIs it possible to access the archives of Mangaluru Samachaara from some place?
ಆಲ್ಲಿ ಸೇರಿಸಿದ್ದು ಮೋಗ್ಲಿಂಗ್ ಫೊಟೊ ಆಲ್ಲ. ಆದು ರೆವೆ. ಜೀಗ್ಲರ್ ಫೋಟೋ. ದಯಮಾಡಿ ಫೋಟೊ ಬದಲಾಯಿಸಿ
ReplyDelete